ಉಡುಪಿ: ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜು ಸಮುದಾಯ ಆರೋಗ್ಯ ವಿಭಾಗ, ಉಡುಪಿ ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣ ಕಾರ್ಯಕ್ರಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳ ಸಹಯೋಗದೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು, ವಿಭಾಗದ ಸಿಬ್ಬಂದಿ, ಉಡುಪಿ ಹಾಗೂ ಮಣಿಪಾಲ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಮನೆಗಳಿಗೆ ಹಾಗೂ ಕೈಗಾರಿಕಾ ಪ್ರದೇಶಗಳಿಗೆ ತೆರಳಿ ಡೆಂಗಿ ಹಾಗೂ ಮಲೇರಿಯಾ ನಿಯಂತ್ರಣಗಳ ಬಗ್ಗೆ ಅರಿವು ಮೂಡಿಸಿದರು.
ಇವರು ಈ ಪ್ರದೇಶಗಳಲ್ಲಿ ಸೊಳ್ಳೆಗಳ ಲಾರ್ವಾ ಸಮೀಕ್ಷೆನಡೆಸಿ ಮನೆಗಳ ಸಮೀಪದಲ್ಲಿ ನಿಂತ ನೀರಿನಲ್ಲಿ ಸೊಳ್ಳೆ ಮರಿಗಳು ಬೆಳೆಯುವುದನ್ನು ತಡೆಯುವ ಬಗ್ಗೆ ಹಾಗೂ ರೋಗ ನಿಯಂತ್ರಣದ ಬಗ್ಗೆ ಸಮಗ್ರ ಮಾಹಿತಿಯನ್ನು ಅಲ್ಲಿನ ಜನರಿಗೆ ಕಳೆದ 15 ದಿನಗಳಿಂದ ನೀಡುತ್ತಿದ್ದಾರೆ.
ಉಡುಪಿ ನಗರ ಪ್ರದೇಶದಲ್ಲಿ ಸುಮಾರು 25-30 ವೈದ್ಯಕೀಯ ವಿದ್ಯಾರ್ಥಿ ಗಳು, ಸಿಬ್ಬಂದಿ ಮನೆಗಳ ಹತ್ತಿರದ ಪ್ಲಾಸ್ಟಿಕ್ ಬಾಟಲಿಗಳು, ಕಪ್ಗಳು, ಟಯರ್ಗಳು ಹಾಗೂ ಇತರೆ ಯಾವುದೇ ವಸ್ತುಗಳಲ್ಲಿ ಒಂದು ಅಥವಾ ಎರಡು ಚಮಚಗಳಷ್ಟು ನೀರು ಸಹ 5-6 ದಿನ ನಿಲ್ಲುವಂತಿದ್ದರೆ ಅಲ್ಲಿ ಬೆಳೆಯುತ್ತಿರುವ ಸೊಳ್ಳೆ ಮರಿಗಳನ್ನು(ಲಾರ್ವಾ) ಪ್ರತ್ಯಕ್ಷವಾಗಿ ಮನೆ ಮಂದಿಗೆ ತೋರಿಸಿದರು. ಸೊಳ್ಳೆಗಳ ನಿಯಂತ್ರಣ ಮಾಡುವ ಬಗ್ಗೆ ಡೆಂಗಿ ಹೆಚ್ಚಿರುವ, ಹೆಚ್ಚುತ್ತಿರುವ ಪ್ರದೇಶಗಳಲ್ಲಿ ಮಾಹಿತಿ ಹಾಗೂ ನಿಯಂತ್ರಣ ಕ್ರಮಗಳನ್ನು ಈ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿ ಜೊತೆ ಸೇರಿ ಮಾಡಲಾಯಿತು.
'ಡೆಂಗಿ ವೈರಸ್ ಹರಡುವ ಈಡಿಸ್ ಸೊಳ್ಳೆಗಳು ಮನೆಯ ಸುತ್ತಮುತ್ತ ಸುಮಾರು 500 ಮೀಟರ್ ವ್ಯಾಪ್ತಿಯಲ್ಲಿಯೇ ಹುಟ್ಟಿ ಬೆಳೆದು ರೋಗವನ್ನು ಹರಡುತ್ತದೆ. ಆದುದರಿಂದ ಪ್ರತಿಯೊಬ್ಬರು ಮನೆಯೊಳಗೆ ಹಾಗೂ ಮನೆ ಸುತ್ತ ಮುತ್ತ ಆ ಪರಿಧಿಯಲ್ಲಿ ಐದು ದಿನಕ್ಕಿಂತ ಹೆಚ್ಚು ನೀರು ನಿಲ್ಲದಂತೆ ನೋಡಿ ಕೊಂಡರೆ ರೋಗ ಹರಡುವುದನ್ನು ಬಹು ಮಟ್ಟಿಗೆ ನಿಯಂತ್ರಿಸಬಹುದು' ಎಂದು ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ.ಅಶ್ವಿನಿ ಕುಮಾರ್ ತಿಳಿಸಿದರು.