ಉಡುಪಿ ಜಿಲ್ಲೆಯಲ್ಲಿ ಪ್ರತಿವರ್ಷ 600 ಮಹಿಳಾ ದೌರ್ಜನ್ಯ ಪ್ರಕರಣ
ಬೆಲ್ ಮಾಡಿ ಆಂದೋಲನ ಸಮಾರೋಪ ಸಮಾರಂಭದಲ್ಲಿ ಸದಾನಂದ ನಾಯಕ್
ಉಡುಪಿ, ಎ.29: ಕೌಟುಂಬಿಕ ದೌರ್ಜನ್ಯ ತಡೆ ಕಾನೂನು ಜಾರಿಗೆ ಬಂದಿದ್ದರೂ ಗ್ರಾಮೀಣ ಮಟ್ಟದಲ್ಲಿ ಆ ಬಗ್ಗೆ ಯಾವುದೇ ಅರಿವು ಮೂಡಿಲ್ಲ. ಈ ಬಗ್ಗೆ ಜಿಲ್ಲೆಯಲ್ಲಿ ಪ್ರತಿವರ್ಷ 500ರಿಂದ 600 ಪ್ರಕರಣಗಳು ಇಲಾಖೆಗೆ ವರದಿಯಾಗುತ್ತಿವೆ ಎಂದು ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಸದಾನಂದ ನಾಯಕ್ ತಿಳಿಸಿದ್ದಾರೆ.
ಅಂಬಲಪಾಡಿ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನದ ಸಭಾಂಗಣ ದಲ್ಲಿ ಇತ್ತೀಚೆಗೆ ನಡೆದ ‘ಬೆಲ್ ಮಾಡಿ ಆಂದೋಲನ- 2010’ರ ಸಮಾರೋಪ ಸಮಾರಂಭದಲ್ಲಿ ಅವರು ಮಾತ ನಾಡುತ್ತಿದ್ದರು.
ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಶೇ.50ರಷ್ಟು ಕುಡಿತಕ್ಕೆ ಸಂಬಂಧಪಟ್ಟರೆ ಶೇ.28ರಷ್ಟು ಅನೈತಿಕ ಸಂಬಂಧಗಳ ಕುರಿತು ಆಗಿದೆ ಎಂದು ನಾಯಕ್ ತಿಳಿಸಿದರು. ಮುಖ್ಯ ಅತಿಥಿಯಾಗಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್ ಮಾತ ನಾಡಿ, ಕೌಟುಂಬಿಕ ಹಿಂಸೆಗೊಳಗಾದ ಮಹಿಳೆ ಜಾಗೃತಳಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬ್ರೇಕ್ ಥ್ರೂ ಸಂಘಟನೆಯ ರಾಜ್ಯ ವ್ಯವಸ್ಥಾಪಕಿ ವಾಣಿ ಪಣಿಯೋಡಿ ವಹಿಸಿದ್ದರು. ಜನ ವಿಕಾಸ ಕೇಂದ್ರದ ಸಂಚಾಲಕ ಪ್ರೇಮಾನಂದ ಕಲ್ಮಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
