ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಮಿತ್ ಶಾ ಗುಜರಾತ್‍ ಭೇಟಿಗೂ ಮುನ್ನ ಕಲ್ಲು ತೂರಾಟ

ಅಮಿತ್ ಶಾ ಗುಜರಾತ್‍ ಭೇಟಿಗೂ ಮುನ್ನ ಕಲ್ಲು ತೂರಾಟ

Mon, 13 Jun 2022 00:55:21  Office Staff   ANI

ಗಾಂಧಿನಗರ್: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದು ಕಾನ್‍ಸ್ಟೇಬಲ್ ಸೇರಿದಂತೆ ನಾಲ್ವರಿಗೆ ಗಾಯಗಳಾಗಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಗುಜರಾತ್‍ನ ಆನಂದ್ ಜಿಲ್ಲೆಗೆ ಭೇಟಿ ನೀಡುವ ಕೆಲವೇ ಗಂಟೆಗಳ ಮೊದಲು, ಈ ಘಟನೆ ನಡೆದಿದೆ. ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ರಾತ್ರಿ 9.30ರ ಸಮಯದಲ್ಲಿ ಕೆಲವು ಸಮುದಾಯದ ಜನರು ವಿವಾದಿತ ಜಾಗದಲ್ಲಿ ಇಟ್ಟಿಗೆಗಳನ್ನು ಹಾಕಿದ್ದರು. ಇದಕ್ಕೆ ಬೇರೆ ಸಮುದಾಯದ ಗುಂಪು ವಿರೋಧ ವ್ಯಕ್ತಪಡಿಸಿದೆ. ಇದರಿಂದ ಎರಡು ಸಮುದಾಯದವರ ನಡುವೆ ವಾಗ್ವಾದ ನಡೆದು ಪರಸ್ಪರ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಒಟ್ಟು 14 ಮಂದಿಯನ್ನು ಬಂಧಿಸಲಾಗಿದೆ.
ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಶಾಂತಿ ಕಾಪಾಡುವಂತೆ ಎರಡೂ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ. ವಿವಾದ  ಬಗೆಹರಿಸುವವರೆಗೂ ನಿವೇಶನದಲ್ಲಿ ಇಟ್ಟಿಗೆ ಹಾಕದಂತೆ ಜನರನ್ನು ಕೇಳಿಕೊಂಡಿದ್ದಾರೆ. ಆದರೆ ಎರಡು ಕೋಮಿನ ಸದಸ್ಯರು ಪರಸ್ಪರ ಕಲ್ಲು ತೂರಾಟ ನಡೆಸಿ ಘರ್ಷಣೆ ನಡೆಸಿದರು.
ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಪೇದೆ ಮತ್ತು ಇನ್ನೊಬ್ಬ ವ್ಯಕ್ತಿಗೆ ಚೂರಿಯಿಂದ ಇರಿದಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ನಗರದಲ್ಲಿ 15 ಸೂಕ್ಷ್ಮ ಸ್ಥಳಗಳಲ್ಲಿ ಭಾರೀ ಭದ್ರತೆ ನಿಯೋಜಿಸಲಾಗಿದೆ. ಪೀಡಿತ ಪ್ರದೇಶಗಳಲ್ಲಿ ಭದ್ರತೆಗಾಗಿ ರಾಜ್ಯ ರಿಸರ್ವ್ ಪೊಲೀಸ್ (ಎಸ್‍ಆರ್‍ಪಿ)ನ ಎರಡು ಕಂಪನಿಗಳನ್ನು ಸಹ ಕರೆಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 


Share: