ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದಿಂದ ದೇವರ ಪಲ್ಲಕ್ಕಿ ಉತ್ಸವ ಶನಿವಾರ ನಗರದಾದ್ಯಂತ ಅದ್ಧೂರಿಯಾಗಿ ಜರುಗಿತು. ಸಾವಿರಾರು ಭಕ್ತರು ಈ ಉತ್ಸವಕ್ಕೆ ಸಾಕ್ಷಿಯಾದರು.
ಸಂಜೆ 4:30 ಘಂಟೆಗೆ ಶ್ರೀ ವೆಂಕಟೇಶ್ವರ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಪಾಲಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅಂದಾಜು 5 ಸಾವಿರಕ್ಕೂ ಹೆಚ್ಚೂ ನಾಮಧಾರಿ ಶ್ವೇತ ವಸ್ತçಧಾರಿಗಳು ಪಾಲಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಚಂಡೆ ವಾದ್ಯ, ತಟ್ಟಿರಾಯ ಕುಣಿತ, ಮಹಿಷಾಸುರ ವೇಷಧಾರಿಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತ್ತು. ಮಹಿಳಾ ಭಜನಾ ತಂಡದವರು ದಾರಿಯುದ್ದಕ್ಕೂ ಗೋವಿಂದ ನಾಮಾವಳಿ ಭಜನೆ ಮಾಡುತ್ತಾ ಸಾಗಿದರು. ಪಾಲಕಿ ಮೆರವಣಿಗೆ ಸಾಗಿದ ಕಡೆಯಲ್ಲಿ ಭಕ್ತರು ದೇವರಿಗೆ ಹಣ್ಣುಕಾಯಿ ಅರ್ಪಿಸಿ ಪುನೀತರಾದರು. ಅಲ್ಲಲ್ಲಿ ಮರೆವಣಿಗೆಯಲ್ಲಿ ಸಾಗುವ ಭಕ್ತರಿಗೆ ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ಗದ್ದುಗೆಯ ಪದ್ಮಾವತಿ ದೇವಿಯ ದೇಗುಲ ತಲುಪಿದ ಪಾಲಕಿಗೆ ಸತಿಪತಿ ಸಮ್ಮಿಲನದ ಪೂಜೆ ಸಲ್ಲಿಸಲಾಯಿತು. ಮಧ್ಯರಾತ್ರಿ ಪಾಲಕಿ ಮೆರವಣಿಗೆ ಮುಗಿಸಿ ಪುರ ಪ್ರವೇಶ ಮಾಡಿದ ಪಾಲಕಿಗೆ ಪುನಃ ಪೂಜೆ ಸಲ್ಲಿಸಿ ಉತ್ಸವ ಮೂರ್ತಿಯನ್ನು ಗರ್ಭಗುಡಿ ಒಳಗಡೆ ಪ್ರತಿಷ್ಠಾಪಿಸಲಾಯಿತು.
ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಉಪಾಧ್ಯಕ್ಷ ಭವಾನಿಶಂಕರ ನಾಯ್ಕ, ಮುಖಂಡರಾದ ಎಂ.ಆರ್.ನಾಯ್ಕ, ರಾಜೇಶ ನಾಯ್ಕ, ಈರಪ್ಪ ಗರ್ಡಿಕರ್ ಸೇರಿದಂತೆ ಸಮಾಜದ ಹಲವು ಮುಖಂಡರು ಮೆರವಣಿಗೆಯಲ್ಲಿ ಇದ್ದರು.