ಕಾರ್ಕಳ, ಅ.6: ಭಾರಿ ಬಿರುಗಾಳಿಯಿಂದಾಗಿ ಬೆಳೆಹಾನಿ, ಮನೆಗಳಿಗೆ ಹಾನಿಯಾದ ಘಟನೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದಲ್ಲಿ ನಡೆದಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಮಂಗಳವಾರ ಬೆಳಗ್ಗಿನ ಜಾವ ೪:೩೦ರ ಸುಮಾರಿಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಕೆಂಪಾಡಿ, ಬ್ರಾಣ ಬೆಟ್ಟು, ಕಡಂಬಾಕ್ಯಾರು, ಮಹಾಲಕ್ಷ್ಮಿ ನಗರದಲ್ಲಿ ಕಂಗಿನ ತೋಟ, ಮನೆಗಳು, ಬೆಳೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರರೂ. ನಷ್ಟ ಸಂಭವಿಸಿದೆ.
ಕೆಂಪಾಡಿ ನೋಣಯ್ಯ ಮುಗೇರ ಎಂಬವರ ಮನೆಯ ಹಂಚುಗಳು ಹಾರಿಹೋಗಿದ್ದು, ಕಡಂಬಾ ಕ್ಯಾರು ಬಾಬಣ್ಣ ಶೆಟ್ಟರ ಮನೆಯ ಹಂಚುಗಳು ಹಾರಿ ಹೋಗಿವೆ. ಇವರ ದೈವದ ಗುಡಿಗೆ ಬೃಹತ್ ಹಲಸಿನ ಮರವೊಂದು ಬುಡ ಸಮೇತ ಉರುಳಿ ಬಿದ್ದು ಗುಡಿ ಸಂಪೂರ್ಣ ಶಿಥಿಲಗೊಂಡಿದೆ. ಬ್ರಾಣಬೆಟ್ಟು ಮಹಾರ ಹೆಗ್ಡೆಯವರ ಅಡಿಕೆ ತೋಟ ಸಂಪೂರ್ಣವಾಗಿ ನಾಶವಾಗಿದ್ದರೆ, ಭತ್ತದ ಗದ್ದೆಯ ಪೈರು ಸಂಪೂರ್ಣ ನಾಶವಾಗಿದೆ.
ಮಹಾಲಕ್ಷ್ಮಿ ನಗರದ ಮಾದ್ದು ಮೊಯ್ಲಿ ಎಂಬವರ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಸಂಜೀವ ಗೌಡರ ಮನೆಯ ಹಂಚು, ಸಂಪೂರ್ಣ ಹಾರಿ ಹೋಗಿ ಬಾಳೆ ತೋಟ ಸಂಪೂರ್ಣ ನಾಶವಾಗಿದೆ. ಶಿಶುಪಾಲ ಜೈನ್ ಮನೆಯ ಮೇಲ್ಛಾವಣಿ ಹಾರಿಹೋಗಿದ್ದು, ಸಂಪೂರ್ಣ ನಾಶವಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟವಾಗಿದೆ.

ಬಿರುಗಾಳಿ ಪೀಡಿತ ಪ್ರದೇಶಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆವೆಲಿನ್ ಆರ್., ಲೂಯಿಸ್, ಪುರಸಭಾ ಸದಸ್ಯ ಮುಹಮ್ಮದ್ ಶರೀಫ್, ರೆಂಜಾಳ ಪಂಚಾಯತ್ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿದರು. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.