ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಅಖಂಡ ಭಾರತ ದೊಂದಿ ಮೆರವಣಿಗೆ ಪಾಕಿಸ್ತಾನದಲ್ಲೂ ನಡೆಸಲಿ: ರೈ ಸವಾಲು

ಅಖಂಡ ಭಾರತ ದೊಂದಿ ಮೆರವಣಿಗೆ ಪಾಕಿಸ್ತಾನದಲ್ಲೂ ನಡೆಸಲಿ: ರೈ ಸವಾಲು

Sun, 30 Oct 2022 08:54:43  Office Staff   vb

ಮಂಗಳೂರು: ಭಾರತ್ ಜೋಡೊ ಯಾತ್ರೆಯನ್ನು ಟೀಕೆ ಮಾಡಿ ಯಾತ್ರೆ ಪಾಕಿಸ್ತಾನಕ್ಕೆ ಹೋಗಿ ಮಾಡಲಿ ಎನ್ನುವ ಬಿಜೆಪಿಯವರು ತಮ್ಮ ಅಖಂಡ ಭಾರತ ದೊಂದಿ ಮೆರವಣಿಗೆಯನ್ನು ಪಾಕಿಸ್ತಾನದ ಸಹಿತ ಅಖಂಡವಾಗಿದ್ದ ಇತರ ದೇಶಗಳಲ್ಲೂ ನಡೆಸಲಿ ಎಂದು ಮಾಜಿ ಸಚಿವ ರಮಾನಾಥ ರೈ ಸವಾಲು ಹಾಕಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡವಾಗಿದ್ದ ಭಾರತದಿಂದ ಅನೇಕ ದೇಶಗಳು ಪ್ರತ್ಯೇಕವಾಗಿವೆ. ಹಾಗಾಗಿ ಭಾರತ್ ಜೋಡೊ ಯಾತ್ರೆ ಬಗ್ಗೆ ಅಪವಾದ ಮಾಡುವವರು ತಮ್ಮ ಮೆರವಣಿಗೆಯನ್ನು ಬರ್ಮಾ, ಬಾಂಗ್ಲಾದೇಶ ಸೇರಿದಂತೆ ಅಖಂಡವಾಗಿದ್ದ ಇತರ ದೇಶಗಳಲ್ಲಿ ಹೋಗಿ ನಡೆಸಲಿ, ಯಾರೂ ತಡೆಯಲಾರರು. ಬಿಜೆಪಿಯವರ ಟೀಕೆಗೆ ಅವರದ್ದೇ ಧ್ವನಿಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಶಕ್ತಿಗಳ ವಿರುದ್ಧ ರಾಹುಲ್‌ ಗಾಂಧಿ ಭಾರತ್ ಜೋಡೊ ಯಾತ್ರೆಯನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿದ್ದಾರೆ. ಯಾತ್ರೆ ಇದೀಗ ತೆಲಂಗಾಣ ಪ್ರವೇಶಿಸಿದ್ದು, ಪಾದಯಾತ್ರೆಯುದ್ದಕ್ಕೂ ಎಲ್ಲಾ ವರ್ಗದ ಜನ ಅವರನ್ನು ಸ್ವಾಗತಿಸುವ ಮೂಲಕ ಯಶಸ್ವಿಯಾಗಿ ಸಾಗುತ್ತಿದೆ. ರಾಹುಲ್‌ರವರು ತಮ್ಮ ಯಾತ್ರೆಯುದ್ದಕ್ಕೂ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ಬಿಜೆಪಿಯವರು ರಥಯಾತ್ರೆ ಮಾಡಿ ರಕ್ತದೋಕುಳಿ ಹರಿಸಿದ್ದರು ಎಂದು ಆರೋಪಿಸಿದರು.

ಉತ್ತರ ಪ್ರದೇಶ, ದಿಲ್ಲಿ ಸೇರಿದಂತೆ ಕೆಲವೊಂದು ರಾಜ್ಯಗಳನ್ನು ಸೀಮಿತವಾಗಿ ಸುಪ್ರೀಂ ಕೋರ್ಟ್ ದ್ವೇಷ ಭಾಷಣದ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಹೇಳಿದೆ. ಈ ಆದೇಶ ದ.ಕ. ಜಿಲ್ಲೆಗೆ ಅನ್ವಯ ಆಗಬೇಕಾಗಿ ದೆ. ಯಾವುದೇ ಧರ್ಮದ ವಿರುದ್ಧ ದ್ವೇಷ ಭಾಷಣ ಮಾಡುವವರಿಗೆ ಈ ಆದೇಶ ಅನ್ವಯವಾದರೆ ಸಾಮರಸ್ಯ ನೆಲೆಯಾಗಲಿದೆ ಎಂದು ರಮಾನಾಥ ರೈ ಹೇಳಿದರು.

ಜಿಲ್ಲೆಯಲ್ಲಿ ಚುನಾವಣೆ ಹತ್ತಿರ ಬರುವಾಗ ಕಾನೂನು ಕೈಗೆತ್ತಿಕೊಳ್ಳುವ ಪ್ರಸಂಗಗಳು ನಡೆಯುತ್ತವೆ. ಕಾಣಿಯೂರು ಪ್ರಕರಣಕ್ಕೆ ಸಂಬಂಧಿಸಿ ಸಿಒಡಿ ತನಿಖೆಯಾಗಬೇಕು ಎಂದು ರೈ ಆಗ್ರಹಿಸಿದರು.

ಹಿರಿಯ ಕಾಂಗ್ರೆಸ್ ನಾಯಕ, ರಾಜ್ಯ ಸಭೆಯ ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಿರುವ ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಬಗ್ಗೆ ಸಿಟಿ ರವಿ ಕೇವಲವಾಗಿ ಮಾತನಾಡಿದ್ದಾರೆ. ಖರ್ಗೆಯವರು ಲೈಫ್ ಜಾಕೆಟ್ ಹಾಕಿಕೊಂಡು ಕೆಲಸ ಮಾಡಬೇಕೆಂದು ಹೇಳಿಕೆ ನೀಡಿದ್ದಾರೆ. ರಾಜಕೀಯದಲ್ಲಿ ಮೊನ್ನೆಯಷ್ಟೇ ಕಣ್ಣು ಬಿಟ್ಟಿರುವ ಸಿಟಿ ರವಿಗೆ ಖರ್ಗೆ ಬಗ್ಗೆ ಮಾತನಾಡುವ ಯಾವುದೇ ಯೋಗ್ಯತೆ ಇಲ್ಲ ಎಂದು ರಮಾನಾಥ ರೈ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹರಿನಾಥ್, ಶಶಿಧರ ಹೆಗ್ಡೆ, ಟಿ.ಕೆ. ಸುಧೀರ್, ಅಪ್ಪಿ, ನೀರಜ್ ಪಾಲ್, ಪ್ರಕಾಶ್ ಸಾಲಿಯಾನ್, ರಮಾನಂದ, ಸುಹಾನ್, ಸದಾಶಿವ ಉಳ್ಳಾಲ್, ಮುಹಮ್ಮದ್ ಮೋನು, ಭಾಸ್ಕರ್, ನವೀನ್ ಡಿಸೋಜಾ, ಅಬ್ದುಲ್‌ ರವೂಫ್, ಶಬೀರ್, ಸಿಎಂ. ಮುಸ್ತಫಾ ಮೊದಲಾದವರು ಉಪಸ್ಥಿತರಿದ್ದರು.


Share: