ಭಟ್ಕಳ, ನವೆಂಬರ್ 11: ಸಚಿವರ ಹುದ್ದೆಯನ್ನು ಕಳಚಿಕೊಂಡು ಸ್ಪೀಕರ್ ಹುದ್ದೆಯನ್ನು ಅಲಂಕರಿಸುವುದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಪಕ್ಷದ ವರಿಷ್ಠರಿಂದ ಯಾವುದೇ ಆದೇಶ ಬಂದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಅವರು ಬಿಜೆಪಿ ಬಿಕ್ಕಟ್ಟಿನ ನಂತರ ಕೆಲವು ಸಚಿವರ ಸಂಭಾವ್ಯ ಸ್ಥಾನಪಲ್ಲಟದ ಹಿನ್ನೆಲೆಯಲ್ಲಿ ಮುಂಜಾವಿನ ಪ್ರಶ್ನೆಗೆ ಉತ್ತರಿಸುತ್ತಿದ್ದರು. ಸಚಿವ ಹುದ್ದೆಯನ್ನು ನೀಡುವುದಾಗಲಿ, ಬಿಡುವುದಾಗಲೀ ವರಿಷ್ಠರೇ ತೀರ್ಮಾನಿಸಲಿದ್ದು, ಒಂದು ವೇಳೆ ಅಂತಹ ಬದಲಾವಣೆಯನ್ನು ಅವರು ಬಯಸಿದರೆ ತಾವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವುದಾಗಿ ತಿಳಿಸಿದರು. ಪಕ್ಷದಲ್ಲಿ ಇತ್ತೀಚಿನ ಬೆಳವಣಿಗೆಯ ಬಗ್ಗೆ ಖೇದ ವ್ಯಕ್ತಪಡಿಸಿದ ಕಾಗೇರಿ, ಇದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆಯನ್ನು ವ್ಯಕ್ತಪಡಿಸಿದರು.